ಪಕ್ಷದ ಏಕತೆ ಕಾಪಾಡಲು ಒಟ್ಟಾಗಿ ಕೆಲಸ ಮಾಡೋಣ: ಡಾಂಗೆ
ಅಫಜಲಪುರ: ಇತ್ತೀಚೆಗೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸ್ವಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ ಎಂದು ಪುರಸಭೆಯ ನಾಮನಿರ್ದೇಶನ ಸದಸ್ಯ ಗುರುಶಾಂತ ಡಾಂಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕ ಎಂ.ವೈ ಪಾಟೀಲ್ ಹಾಗೂ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಜನಪರ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಆದರೆ ವಿನಾಕಾರಣ ಕೆಲ ಮುಖಂಡರು ಶಾಸಕರು ಹಾಗೂ ಅವರ ಸುಪುತ್ರನ ಮೇಲೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದನ್ನು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಇಲ್ಲವಾದರೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಸಮಾಲೋಚನೆ ನಡೆಸಬೇಕು.
ಪಕ್ಷದ ಒಳಗಿನ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ. ಇದರಿಂದ ಪಕ್ಷದ ಗೌರವಕ್ಕೆ ಧಕ್ಕೆಯಾಗುತ್ತದೆ.
ಪಕ್ಷದ ವಿರುದ್ದವಾಗಿ ಮಾತನಾಡುವವರು ಶಿಸ್ತನ್ನು ಪಾಲಿಸಬೇಕು ಮತ್ತು ತಮ್ಮ ಅಭಿಪ್ರಾಯಗಳನ್ನು ಒಳಗಡೆಯಲ್ಲೇ ವ್ಯಕ್ತಪಡಿಸಬೇಕು.
“ಪಕ್ಷದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಹೊರಗೆ ಹೋಗಿ ಪಕ್ಷದ ವಿರುದ್ಧ ಮಾತನಾಡುವುದು ವಿರೋಧ ಪಕ್ಷಗಳಿಗೆ ಲಾಭವಾಗುತ್ತದೆ.
ಹೀಗಾಗಿ ಪಕ್ಷದ ಏಕತೆ ಮತ್ತು ಶಿಸ್ತು ಕಾಪಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.










